|| ಶ್ರೀ ರಾಮ ಜಯ ರಾಮ ಜಯ ಜಯ ರಾಮ ||

Wednesday, July 6, 2011

ಕೂಪ ಮಂಡೂಕೋಪನಿಷತ್!

     ಸಾಮಾನ್ಯವಾಗಿ ಅಲ್ಪಜ್ಞಾನಿಗಳನ್ನು, ವಿಶಾಲ ಮನಸ್ಸಿಲ್ಲದವರನ್ನು ಮತ್ತು ತಮ್ಮನ್ನೇ ಸರ್ವಜ್ಞರೆಂದುಕೊಂಡವರನ್ನು ಕಂಡಾಗ ಕೂಪ ಮಂಡೂಕ ಗಳೆಂದು ಮೂದಲಿಸುವುದು ವಾಡಿಕೆ. ನಿಜಾರ್ಥದಲ್ಲಿ ನೋಡಿದರೆ ಈ ಹೋಲಿಕೆ ಆ ಕೂಪದಲ್ಲಿರುವ ಮಂಡೂಕಕ್ಕೆ ಮಾಡುವ ಅಪಚಾರ/ಅವಹೇಳನವೇ ಸರಿ. ಆ ಭಾವಿಯಲ್ಲಿ ಆ ಕಪ್ಪೆ ತನಗೆ ಬೇಕಾದ ಆಹಾರಾಶ್ರಯಾದಿಗಳನ್ನು ಪಡೆದು ತನ್ನಷ್ಟಕ್ಕೆ ತಾನು ಸುಖ-ನೆಮ್ಮದಿಯಿಂದ ವಟರ್...ವಟರ್... ಎಂದು ಹಾಡುತ್ತಾ ಬದುಕುತ್ತಿದೆ. ಅದಕ್ಕೆ ಹೊರಗಿನ ನದಿ-ಸಮುದ್ರಗಳ ಅರಿವಿಲ್ಲ; ಅದಕ್ಕೆ ಆ ಅರಿವು ಬೇಡವೂ ಬೇಡ! ತನಗೆ ಬೇಕಾದದ್ದೆಲ್ಲಾ ಅದಕ್ಕೆ ಅಲ್ಲಿಯೇ ಸಿಕ್ಕಿದೆ; ಇಲ್ಲವೇ ಸಿಕ್ಕಷ್ಟರಲ್ಲಿ ತೃಪ್ತಿ ಹೊಂದಿದೆ. ಹಾಗಾಗಿಯೇ ಅದು ಅಲ್ಲಿ ಹಾಯಾಗಿದೆ!

     ಹಾಗೆ ನೋಡಿದರೆ ನಾವು ಒಬ್ಬೊಬ್ಬರೂ ಕೂಪ ಮಂಡೂಕಿಗಳೇ. ವ್ಯತ್ಯಾಸವಿಷ್ಟೇ: ಅದು ಪಡೆದುದನ್ನನುಭವಿಸುತ್ತಾ ಅದರಲ್ಲೇ ತೃಪ್ತಿ ಹೊಂದಿ ಹಾಯಾಗಿದೆ. ನಾವಿಲ್ಲ ಅಷ್ಟೆ. ನಮಗೆ ಇರುವ ಕೂಪದಲ್ಲೇ ನೆಮ್ಮದಿಯಾಗಿ ಬದುಕಲೂ ಬಾರದು; ನದಿ-ಸಮುದ್ರಗಳಲ್ಲಿ ಈಜಿ ಬದುಕಲೂ ಧೈರ್ಯ ಸಾಲದು. ಪ್ರತಿಯೊಬ್ಬರನ್ನೂ ಗಮನಿಸಿ. ಅವರವರ ಕಾರ್ಯಕ್ಷೇತ್ರವೇ ಅವರವರ ಕೂಪ! ಅದನ್ನು ಮೀರಿ ಬಹುಮಂದಿ ಚಿಂತಿಸಲಾರರು; ಬದುಕಲಾರರು. ಜಾಣನಾದವನು ಬೇರೆ ಕೂಪಗಳಲ್ಲಿನ ಮಂಡೂಕಗಳ ಬಗ್ಗೆ ತಲೆ ಕೆಡಿಸಿಕೊಳ್ಳದೇ ತನ್ನ ಕೂಪದಲ್ಲಿಯೇ ಸುಖ-ಸಂತೋಷ-ನೆಮ್ಮದಿಯನ್ನು ಕಂಡುಕೊಳ್ಳುತ್ತಾನೆ. ಇಂತಹವರು ವಿರಳ. ತನ್ನ ಕೂಪವನ್ನೇ ಪಾಪಕೂಪವನ್ನಾಗಿಸಿಕೊಂಡು ಇತರೇ ಕೂಪಗಳಲ್ಲಿರುವ ಮಾನವ-ಮಂಡೂಕಗಳ ಬಗ್ಗೆಯೇ ಟೀಕೆ-ಟಿಪ್ಪಣಿ, ಪರಿಹಾಸ, ವ್ಯಂಗ್ಯ ಮತ್ತು ಅಪಹಾಸ್ಯ ಮಾಡುತ್ತಾ ಬಾಳುವವರೇ ಇಂದು ಬಹುಜನ. ಅಂತಹವರು ತಮ್ಮ ಕೂಪದಲ್ಲಿಯೂ ನೆಮ್ಮದಿಯಾಗಿ ಬಾಳಲಾರರು; ಇತರರನ್ನೂ ನೆಮ್ಮದಿಯಾಗಿ ಬದುಕಲು ಬಿಡಲಾರರು. ತಾನೂ ಬಾಳಲಾರ, ಉಳಿದವರನ್ನೂ ಬಾಳಲೂ ಬಿಡಲಾರ ಎಂಬಂತೆ.

     ಒಬ್ಬ ಬಡವನಿದ್ದನಂತೆ. ಅವನು ಪ್ರತಿದಿನ ಅಚಂಚಲ ಭಕ್ತಿಯಿಂದ ದೇವಸ್ಥಾನಕ್ಕೆ ಹೋಗಿ ನಮಸ್ಕರಿಸಿ ಕಾರ್ಯಪ್ರವೃತ್ತನಾಗುತ್ತಿದ್ದ. ಆತನ ಭಕ್ತಿಗೆ ಒಲಿದ ದೇವರು ಪ್ರತ್ಯಕ್ಷನಾಗಿ ನಿನಗೇನು ವರ ಬೇಕು, ಕೇಳು ಎಂದನಂತೆ. ಆ ಬಡವ ನನಗೆ ಆನೆ ಬೇಕು ಎಂದನಂತೆ. ಚಕಿತಗೊಂಡ ದೇವರು, ಅಲ್ಲಾ, ನಿನ್ನನ್ನು ನೀನೇ ಸಾಕಲು ನಿನಗಾಗುತ್ತಿಲ್ಲ. ಇನ್ನು ಆನೆಯನ್ನು ಎಲ್ಲಿಂದ ಸಾಕುವೆ, ಬೇರೆ ವರ ಕೇಳು ಎಂದನಂತೆ. ಆದರೆ ಆ ಬಡವ ತನಗೆ ಅನೆ ಯೇ ಬೇಕೆಂದಾಗ, ಬಹುಶ: ಚಿನ್ನದ ಆನೆ ಕೇಳುತ್ತಿದ್ದಾನೆಂದು ಭಾವಿಸಿ ದೇವರು ಅದನ್ನು ಕರುಣಿಸಲು ಮುಂದಾಗುತ್ತಾನೆ. ಆ ಬಡವ ಅದಲ್ಲ, ನನಗೆ ಆನೆ ಎಂದರೆ ರೋಗ್ಯ ಮತ್ತು ನೆಮ್ಮದಿಯ ವರ ಕರುಣಿಸು ಎಂದನಂತೆ!

     ನಮಗೆಲ್ಲರಿಗೂ ಬೇಕಾದ್ದೂ ಅದೇ ಆನೆಯೇ! ದಿನನಿತ್ಯ ನಡೆಸುವ ಎಲ್ಲ ಕಸರತ್ತುಗಳೂ ಅದಕ್ಕಾಗಿಯೇ. ಕಸರತ್ತುಗಳ ವೈಖರಿ, ಮಾರ್ಗ, ಪರಿಕಲ್ಪನೆಗಳು ಮಾತ್ರಾ ಬೇರೆ ಬೇರೆ. ಹಾಗಾಗಿ ಒಬ್ಬೊಬ್ಬರದು ಒಂದೊಂದು ರೀತಿಯ ಸಾಧನಾಪಥ. ಕೆಲವರ ನನ್ನ ಪಥವೇ ಅಂತಿಮ - ಸುಗಮ ಎಂಬುದು ಬಹುಶ: ಅತೀ ಬಾಲಿಶವಾದ, ಅಹಂಕಾರದ ಮತ್ತು ಅಜ್ಞಾನದ ಮಾತಾದೀತು. ಭಗವದ್ಗೀತೆ ಕೂಡ ಆಧ್ಯಾತ್ಮಿಕ ಸಾಧನೆಗಾಗಿ ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಮುಂತಾದ ಹಲವಾರು ಸಾಧನಾ ಪಥಗಳನ್ನು ಪ್ರತಿಪಾದಿಸಿದೆ. ಎಲ್ಲರೂ ಎಲ್ಲವನ್ನೂ ಪರಿಪಾಲಿಸುವುದು ಅತೀ ಕಷ್ಟಸಾಧ್ಯವಾದ ವಿಚಾರ. ಅವರವರ ಕರ್ಮಾನುಸಾರ, ಶಕ್ತ್ಯಾನುಸಾರ ಮತ್ತು ಸಂಸ್ಕಾರಾನುಸಾರ ಒಬ್ಬೊಬ್ಬರು ಒಂದೊಂದು ಮಾರ್ಗಾಶ್ರಯವನ್ನು ಆರಿಸಿಕೊಳ್ಳುತ್ತಾರೆ. ಅದಕ್ಕೆಂದೇ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಅಲ್ಪ ಅನುಷ್ಠಾನವೂ ಕಾರ್ಯಸಿದ್ಧಿ ನೀಡುವುದು ಎಂಬುದನ್ನು ಈ ರೀತಿ ಹೇಳಿದ್ದಾರೆ:
'ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭೂಯಾತ್ '- ಅಂದರೆ ಗೀತಾಸಾರದ ಸ್ವಲ್ಪ ಅನುಷ್ಠಾನ ಕೂಡ ಮನುಷ್ಯನನ್ನು ಹೆಚ್ಚು ಶ್ರೀಮಂತನೂ, ಸುಂದರನೂ ಹಾಗೂ ಭಯರಹಿತನೂ ಆಗಿ ರೂಪುಗೊಳ್ಳುವಲ್ಲಿ ನೆರವಾಗುತ್ತದೆ. ಹೇಗೆ ಕೂಪದಲ್ಲಿರುವ ಮಂಡೂಕ ತನಗೆಟಕಿದಷ್ಟನ್ನು ಪಡೆದು ಮುನ್ನಡೆಯುತ್ತದೆಯೋ ಮತ್ತು ಅಷ್ಟರಲ್ಲಿಯೇ ನೆಮ್ಮದಿಯನ್ನು ಪಡೆಯುತ್ತದೆಯೋ ಅದೇ ರೀತಿ ನಮ್ಮ ಜ್ಞಾನಚಕ್ಷುಗಳಿಗೆಟಕುವಂತಹ ಕೆಲವೇ ಉತ್ತಮ ವಿಚಾರಗಳನ್ನು ಅರಿತು, ಪರಾಮರ್ಶಿಸಿಕೊಂಡು, ಅಳವಡಿಸಿಕೊಂಡು ನಂತರ ನಿರಂತರ ಸಾಧನೆಗೈಯುವುದು ದ್ವಂದ್ವರಹಿತ ಬಾಳ್ವೆಗೆ ಶ್ರೀ ಕೃಷ್ಣ ಹೇಳಿದಂತೆ ನಾಂದಿಯಾಗಬಲ್ಲದು.

     ಹಾಗಾಗಿ ಕೂಪದಲ್ಲಿರುವ ಬಡಪಾಯಿ ಮಂಡೂಕದ ಗೊಡವೆ ನಮಗೆ ಬೇಡ. ಅದು ಅಲ್ಲಿ ಸುಖವಾಗಿಯೇ ಇದೆ; ಇರುತ್ತದೆ. ಅದನ್ನು ಹಾಗೆಯೇ ಅಲ್ಲಿಯೇ ಬಿಟ್ಟುಬಿಡೋಣ. ಮಂಡೂಕದ ಬಾಳು ನಮಗೆ ಆದರ್ಶಪ್ರಾಯವದರಷ್ಟೇ ಸಾಕು. ಅದರಂತೇ, ನಮ್ಮ ಇತಿ-ಮಿತಿಯಲ್ಲಿಯೇ, ನಮ್ಮ ನಮ್ಮ ಕೂಪಗಳಲ್ಲಿಯೇ, ಸಂತೋಷ-ಚಿತ್ತರಾಗಿ ಬಾಳಿದರೆ ಅದಕ್ಕಿಂತ ಸುಖ-ಶಾಂತಿ-ನೆಮ್ಮದಿ ಬೇಕೆ?
ಅಲ್ಪಜ್ಞರೇ ಎಲ್ಲ ಇಲ್ಲಿ ಸರ್ವಜ್ಞರು ಯಾರು ಇಲ್ಲ
ಅಲ್ಪವಿದ್ಯಾ ಮಹಾಗರ್ವಿಗಳೇ ಬಹುತೇಕ ಇಲ್ಲಿ ಎಲ್ಲ
ಅಲ್ಪಮತಿಯಲ್ಲೇ ಅರಸೋಣ ಮನದ ಸಚ್ಚಿದಾನಂದ
ಅದಕ್ಕಿಂತಿನ್ನೇನು ಬೇಕು ಓ ಮುಕುಂದ 
 
     ಜಗದ ಎಲ್ಲ ಸ್ವಯಂ-ನಿರ್ಮಿತ ಕೂಪಗಳಲ್ಲಿರುವ ಮಾನವ-ಮಂಡೂಕಿಗಳೆಲ್ಲರೂ ಸಮಾನರೇ. ಎಲ್ಲರೂ ಸಮಾನ-ಸುಖಿಗಳಾಗಿ ಬಾಳಲಿ ಎಂಬ ಭಾವ ಅಲ್ಪಮತಿಯನ್ನೂ (ಕೂಪ ಮಾನವ-ಮಂಡೂಕವನ್ನೂ) ಸರ್ವಜ್ಞನನ ಸಮೀಪವಾದರೂ ತರಬಲ್ಲದು.
                                                                                                                                    -ಕವಿ ವೆಂ. ಸುರೇಶ್

No comments:

Post a Comment